ಪುಟ್ಟು ಕಂದಮ್ಮ

ನೀ ಅತ್ತರೆ ನಾ ಅಳುವೆ
ನೀ ನಕ್ಕರೆ ನಾ ನಗುವೆ
ನಿನ್ನೊಡನೆ ನಾನಿರಲು
ಜಗವನ್ನೇ ನಾ ಮರೆವೆ ||

ಅಕ್ಕರೆಯ ಮುದ್ದು ನಗು
ಸವಿ ಜೇನ ಹನಿಯಂತೆ
ಪುಟ್ಟ ಕಾಲ್ಗಳ ಗೆಜ್ಜೆ ದನಿ
ಇಂಪು ನಾದದ ಲಹರಿ ||

ನಾ ಬರುವುದ ನೀ ಕಾಯುವೆ
ನಿನ್ನ ಅಪ್ಪುಗೆ ಕೆಂದಾವರೆ
ನಿನ್ನ ಪ್ರೀತಿಯ ಕಣ ಕಣವೂ
ನನ್ನ ಬಾಳಿಗೆ ಮಹದಾಸರೆ ||

ಆಶಾವಾದಿಯ ಗುನುಗು !

ಒಳಗೊಂದು ಹೊರಗೊಂದು ನನಗಿರಲು ಬಾರದು
ತಳಮಳದ ಇರಿತವನು ಸಹಿಸಲೂ ಆಗದು
ಮನಸು ಹುಚ್ಚು ಕುದುರೆ ಕನಸ ಕಾಣದು ಬಿಡದು
ನನಗಾರು ಹಿತವರು ಪುಟ್ಟು ಮನಸನ್ನ ಅರಿವವರು?

ಪ್ರೀತಿ ತೋರುವ ಮನಸು ಪ್ರೀತಿ ಬಯಸುದು ತಪ್ಪೇ?
ಮತ್ತೆ ಬಾರದು ಜಗದಿ ಕಳೆದು ಹೋಗಿಹ ಸಮಯ
ಕ್ಷಣದ ಖುಷಿ ಸಾಕೆನಗೆ ಮುಗುಳು ನಗೆ ತುಟಿ ಮೇಲೆ
ಮತ್ತೆ ಬರಲಿದೆ ವಸಂತ ಇಂದಲ್ಲ ನಾಳೆ ...

(Poem) ಎನ್ನ ಮನದನ್ನೆ - ೨

ಎನ ನಲ್ಲೆಯ ಬಗ್ಗೆ ಏನೆಂದು ವಿವರಿಸಲಿ
ಸರಳ ಸುಂದರತೆಯ ಸಾಕಾರ ಇವಳು ||

ಒಲ್ಲದಿಹ ಮಾತಿಗೆ ಸನ್ನೆಯಲೇ ನಕಾರ
ಪ್ರೀತಿ ಬಯಸುತಿಹ ಜೀವಕೆ ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ ಜಡೆಯ ಮನ ಕದ್ದ ಒಡತಿ ||

ಜತೆಗೂಡಿ ನನ್ನೊಡನೆ ಎಲೆಯಡಿಕೆ ಮೆಲ್ಲುತಲಿ
ಸುದ್ದಿ ಕಂತೆಯ ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ ಬಿಡಿ
ಕೊನೆಯಲ್ಲಿ ನನ್ನ ಬಾಯ್ಮುಚ್ಚಿಸುವಳೇ ಇವಳು! ||

- uShai


"ಆಮಿಶ್"


Amish ನಾ ಹುಟ್ಟಿ ಬೆಳೆದಿದ್ದು ಪುಟ್ಟ ಹಳ್ಳಿಯೊಂದರಲ್ಲಿ. ಹಳ್ಳಿ ಎಂದ ಮೇಲೆ ಬೇಸಗೆಯಲ್ಲಿ ದಿನಕ್ಕೆ ಇಂತಿಷ್ಟು ನಿರ್ದಿಷ್ಟ ಕಾಲ ಪವರ್ ಕಟ್ ಇರುವುದು ಬಲು ಸಾಮಾನ್ಯದ ವಿಷಯ. ತಿಂಗಳ ಮೊದಲ ೧೫ ದಿವಸ ಬೆಳಗ್ಗೆ ೬ ಘಂಟೆ ಕಟ್ ಇದ್ದರೆ, ಉಳಿದ ೧೫ ದಿವಸ ಮಧ್ಯಾಹ್ನ ಮೇಲೆ. ಆವಾಗ ಅದಕ್ಕನುಗುಣವಾಗಿ ನಮ್ಮ ದಿನಚರಿಯೂ ಬದಲಾಗುತ್ತಿತ್ತು! ಬೆಳಗ್ಗೆ ೬ ಘಂಟೆಗೆ ಕರೆಂಟು ಹೋಗುವುದೆಂದು ಚುಮು ಚುಮು ಬೆಳಗಾದೊಡನೆ ಎದ್ದು ನೀರು ತುಂಬಿಸಿಡುವುದು ಅಪ್ಪನ ಕೆಲಸವಾದರೆ, ದೋಸೆ ಹಿಟ್ಟು ಅಥವಾ ಅಡುಗೆಗೆ ಬೇಕಾದ ಸಾಂಬಾರ್ ಕಡೆಡಿದುವುದು ಅಮ್ಮನ ಪಾಳಿ.ವಿದ್ಯುತ್-ಚಾಲಿತ ಯಂತ್ರಗಳಿಗೆ ಇಷ್ಟರ ಮಟ್ಟಿಗೆ ಅವಲಂಬಿಯಾಗಿದ್ದೇವೆ ನಾವು ಮಾನವರು ಅಲ್ವೇ?. ಇದರ ಮಧ್ಯದಲ್ಲಿ ಟೀವಿಯಲ್ಲಿ ಕ್ರಿಕೆಟ್ ಮ್ಯಾಚ್ ಇದ್ದರಂತೂ ವಿದ್ಯುತ್ ಪಾಲಿಕೆಗೆ ಹಲವು ಹಿಡಿಶಾಪಗಳ ಕಂತೆ ಬೇರೆ! ಅಂತೂ ೬ ಘಂಟೆಗಳ ಕರೆಂಟ್-ರಹಿತ ಕಾಲ ಕಳೆವುದೆಂದರೆ ಹೇಳಬಾರದಷ್ಟು ಕಷ್ಟಕರವೆನಿಸಿತ್ತು.

ಇಂತದ್ರಲ್ಲಿ ವಿದ್ಯುತ್,ಟಿವಿ,ಕಾರು ... ತಮ್ಮ ಕೈಗೆಟುಕುವಂತಿದ್ದರೂ ಅವನ್ನು ಜೀವನವಿಡೀ ಉಪಯೋಗಿಸದೇ ಇರುವ ಜನರೂ ಅಮೆರಿಕ,ಕೆನಡಾದಂಥಹ ಮುಂದುವರಿದ ದೇಶಗಳಲ್ಲಿ ಇದ್ದಾರೆ ಅಂದ್ರೆ ಮಹದಾಶ್ಚರ್ಯವೆನಿಸಬಹುದಲ್ವೇ?

ಹೌದು, "ಆಮಿಶ್(Amish)" ಅನ್ನುವ ಧಾರ್ಮಿಕ ಪಂಗಡದ ಜನರು ಇನ್ನೂ ೧೮ನೇ ಶತಮಾನದಂಚಿನ ಕಾಲದಿಂದ ಹೊರಗೆ ಬಂದಿಲ್ಲ. "ಸಹಜೀವನವೇ ಮಾನವ ಧರ್ಮ" ಎನ್ನುವುದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಈ ಜನಾಂಗ ಮಾಯಾ ಜಗತ್ತಿನ ಥಳಕಿನಿಂದ ಸಾವಿರಾರು ಯೋಜನ ದೂರವಿದ್ದಾರೆ.

ಆಮಿಶ್ ಸಂಸ್ಕೃತಿಯಲ್ಲಿ ಮುಖ್ಯವಾಗಿ ಗಮನಕ್ಕೆ ಬರುವ ಸಂಗತಿಯೆಂದರೆ ಒಗ್ಗಟ್ಟಿನ ಸಾಂಸಾರಿಕ ಜೀವನ. ಏಳರಿಂದ ಹತ್ತು ಮಕ್ಕಳಿರುವ ದೊಡ್ಡ ಕುಟುಂಬಗಳು ಸರ್ವೇ ಸಾಮಾನ್ಯ.ಗಂಡಸರು ಹೊಲ-ಗದ್ದೆಗಳ ಕೆಲಸ ನಿರ್ವಹಿಸಿದರೆ, ಹೆಂಗಸರು ಅಡುಗೆ,ಬಟ್ಟೆ ತೊಳೆಯುವುದು ಇತ್ಯಾದಿ ಮನೆಗೆಲಸಗಳನ್ನು ಮಾಡುತ್ತಾರೆ. ಜರ್ಮನ್ ಭಾಷೆ ಆಡುಭಾಷೆ ಆಗಿದ್ದರೂ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನೂ ಕಲಿಸಲಾಗುತ್ತದೆ.ಆಮಿಶ್ ಮಕ್ಕಳು ಕಲಿಯುವುದು ಹೆಚ್ಚೆಂದರೆ ೮ನೇ ತರಗತಿಯವರೆಗೆ; ಅದೂ ತಮ್ಮದೇ ಆದ ಪ್ರೈವೇಟ್ ಶಾಲೆಗಳಲ್ಲಿ ಮಾತ್ರ.

Amish"ಅನಬಾಪ್ಟಿಸ್ಟ್"ಗಳ ಅನುಯಾಯಿಗಳಾದ ಇವರ ಒಂದು ಗುಂಪು ಸುಮಾರು ಹದಿನಾರನೇ ಶತಮಾನದ ಕೊನೆಗೆ ಅಮೆರಿಕಾದ ಪೆನ್ಸಿಲ್ವೇನಿಯಾಕ್ಕೆ ಬಂದು ನೆಲೆಸಿತು. ಒಟ್ಟಾಗಿ ೨೪ ರಾಜ್ಯಗಳು, ಕೆನಡಾ ಹಾಗೂ ಮಧ್ಯ ಅಮೆರಿಕಾಗಳಲ್ಲಿ ಹರಡಿಕೊಂಡಿರುವ ಜರ್ಮನ್ ಮೂಲದ ಇವರ ಉಡುಗೆ-ತೊಡುಗೆಗಳಲ್ಲಿ ನಿರಾಡಂಬರತೆ ಎದ್ದು ಕಾಣುವುದು.ಇವರು ತಾವೇ ಮನೆಗಳಲ್ಲಿ ತಯಾರಿಸಿದ ಬಟ್ಟೆ ಉಡುತ್ತಾರೆ(ಹೆಚ್ಚಾಗಿ ನೀಲಿ,ಕಪ್ಪು,ಕಂದು ಅಥವಾ ನೇರಳೆ ಬಣ್ಣದವು). ಆಧುನಿಕ ತಂತ್ರಜ್ಞಾನ ತಮ್ಮ ಬಲಯುತವಾದ ಕುಟುಂಬದ ಅಯಕಟ್ಟನ್ನು ಸಡಿಲಗೊಳಿಸುವುದೆಂದು ಅವರ ನಂಬಿಕೆ. ಹೆಚ್ಚಾಗಿ ಹೊಲ ಕೆಲಸಗಳಿಗೆ ಕುದುರೆ ಚಾಲಿತ ಯಂತ್ರೋಪಕರಣಗಳು, ಓಡಾಡಲು ಕುದುರೆ ಗಾಡಿ ಬಳಕೆಯಲ್ಲಿವೆ. ತಮ್ಮ ಮನೆಗಳಲ್ಲಿ ಟೆಲೆಫೋನ್ ಸೌಲಭ್ಯ ತೆಗೆದುಕೊಳ್ಳದಿದ್ದರೂ ಹಲವು ಕುಟುಂಬಗಳು ಒಟ್ಟು ಸೇರಿ ಒಂದು ಕಡೆ ಪುಟ್ಟ ಮರದ ಜೋಪಡಿಯೊಂದರಲ್ಲಿ ಬೂತ್ ಇಟ್ಟುಕೊಂಡಿರುತ್ತಾರೆ.

ಆಮಿಶ್ ಜನರು ತಮ್ಮದೇ ಪಂಗಡದೊಳಗೆ ಮಾತ್ರ ಮದುವೆ ಮಾಡಿಕೊಳ್ಳುತ್ತಾರೆ. ಅಂತರ್ಜಾತೀಯ ವಿವಾಹ ಅಥವಾ ಡೈವೋರ್ಸ್‌ಗಳಿಗೆ ಅವಕಾಶವೇ ಇಲ್ಲ!.


- uShai

ಮರಳಿ ಪಯಣ ಕನಸಿನೂರಿಗೆ...

ದಿನಗಳಾದವು ಅದೆಷ್ಟೋ ಅಕ್ಷರಗಳ ಪೋಣಿಸದೆ
ಪದಗಳ ಜೋಡಣೆಗೆ ಪರದಾಡುವ ಪರಿಸ್ಥಿತಿಯೇ?

ವಿನಾ ಕಾರಣ ಕೊಡಲೇಕೆ ಹಲವು ನೆಪಗಳ ಕಂತೆ
ಮತ್ತೆ ನಡೆಯುವುದಿಲ್ಲಿ ಕನಸುಗಳ ಸಂತೆ

ಹೊತ್ತು ಆಸೆಗಳ ಸಾಗಿಹೆನು ಮರಳಿ ಕನಸಿನೂರಿನ ಕಡೆಗೆ..


- uShai

ಬಾಲ್ಯದ ಒಂದು ನೆನಪ ತುಣುಕು

ನನಗೆ ಚಿಕ್ಕಂದಿನಿಂದಲೂ ಕಾಮಿಕ್ಸ್ ಕಥೆಗಳನ್ನು ಓದುವುದೆಂದರೆ ಪಂಚಪ್ರಾಣ. ಊಟ-ನಿದ್ರೆ ಬಿಟ್ಟಾದರೂ ಓದುವಷ್ಟು ಹುಚ್ಚು. ಫಾಂಟಮ್ (ನಡೆದಾಡುವ ಭೂತಪ್ಪ), ಇಂದ್ರಜಾಲ ಮಾಂಡ್ರೇಕ್ ನ ಕಥೆಗಳಂತೂ ನನ್ನನ್ನು ಹೊಸ ರೋಮಾಂಚಕ ಜಗತ್ತಿಗೆ ಒಯ್ದಂತೆ ಅನಿಸುತ್ತಿತ್ತು. ಪ್ರತಿ ಸಲ ಅಪ್ಪ ಪೇಟೆಗೆ ಹೊರಡುವಾಗಲೂ ಚಾಕಲೇಟು ತರದಿದ್ದರೂ ಪರವಾಗಿಲ್ಲ; ಕಾಮಿಕ್ಸ್ ಕಥೆ ಪುಸ್ತಕ ತರಲು ನೆನಪಿಸುತ್ತಿದ್ದೆ.ದಿನ ಕಳೆದಂತೆ ನನ್ನ ಓದಿನ ಅಭಿರುಚಿಯ ಪಟ್ಟಿಗೆ ಪುರಾಣ ಕಥೆಗಳು, ಪಂಚತಂತ್ರ, ಬೀರಬಲ್ಲನ ಕಥೆಗಳು ಹೀಗೆ ಹಲವಾರು ಸೇರಿಕೊಂಡವು. ಪೌರಾಣಿಕ ಕಥೆಗಳಲ್ಲಿ ನನಗೆ ಬಲು ಇಷ್ಟವೆನಿಸಿದ್ದು ಮಹಾಭಾರತ. ನ್ಯಾಯ-ನೀತಿ ಧರ್ಮಗಳೇ ಧಾರೆ ಎರೆದಂತಿರುವ ರಾಮಾಯಣ ಪ್ರಿಯವೆನಿಸಿದರೂ, ನವರಸಭರಿತ ಮಹಾಭಾರತದ ಕಥೆ-ಉಪ ಕಥೆಗಳು ಬಲು ಸ್ವಾರಸ್ಯಕರವೆನಿಸಿದವು.

ಮಹಾಭಾರತ - ಪುರಾತನ ಮಹಾಗ್ರಂಥಗಳಲ್ಲೊಂದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದರ ಅಗ್ಗಳಿಕೆ ಬಗ್ಗೆ ನಾನು ಹೆಚ್ಚೇನೂ ಉಲ್ಲೇಖಿಸುವ ಅವಶ್ಯಕತೆಯಿಲ್ಲ. ತಮ್ಮದೇ ಆದ ಶೈಲಿಯಲ್ಲಿ ವೇದವ್ಯಾಸರ ಮೂಲಕಥೆಯ ಹಂದರದ ಸುತ್ತ ಕುಮಾರವ್ಯಾಸ,ರನ್ನ,ಪಂಪ ಹೀಗೆ ಹತ್ತಾರು ಕವಿಗಳು ಉಪಕಥೆಗಳ ಬಳ್ಳಿಗಳನ್ನು ಹಬ್ಬಿಸಿದ್ದಾರೆ;ತಮಗಿಷ್ಟವಾದ ಪಾತ್ರಗಳಿಗೆ ಹೊಸ ರೂಪದ ಜೀವವನ್ನು ತುಂಬಿದ್ದಾರೆ. ಕುಮಾರವ್ಯಾಸನ ಕಥಾಮಂಜರಿ, ರನ್ನನ ಗದಾಯುದ್ಧ - ಇವುಗಳ ಬಗ್ಗೆ ಬರೆಯುವಷ್ಟು ಅಥವಾ ವಿಮರ್ಶಿಸುವಷ್ಟು ನಾನು ಅನುಭವಿಯಲ್ಲ. ಆದರೂ 'ಭಾರತ ಕಥಾಮಂಜರಿ' ಹಾಗೂ 'ಗದಾಯುದ್ಧ'ಗಳಲ್ಲಿ ನನಗೆ ಕಂಡ ಸಾಮ್ಯತೆಯೆಂದರೆ 'ಸುಯೋಧನನ ಪಾತ್ರ'. ಓದುತ್ತಿದ್ದಂತೆ ಆ ಪಾತ್ರದ ಒಳ್ಳೆಯ ಗುಣಗಳು ತಲೆಯೆತ್ತಿ ತೋರಿದಂತೆ ಭಾಸವಾಗುತ್ತವೆ. ಪರಿಸ್ಥಿತಿಯೇ ಪ್ರಚೋದಕ ರೂಪದಲ್ಲಿ ಸುಯೋಧನನನ್ನು ದುರ್ಯೋಧನನಾಗಿ ವರ್ತಿಸುವಂತೆ ಕಾರಣವಾಯಿತೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಷಯದ ಬಗ್ಗೆ ಮತ್ತೊಮ್ಮೆ ಬರೆಯುವೆ ಇನ್ನೊಂದು ಅಂಕಣದಲ್ಲಿ...

ನನ್ನ ತಂದೆಯ ಆತ್ಮೀಯ ಗೆಳೆಯರೊಬ್ಬರು ಮನೆಗೆ ಬಂದಾಗಲೆಲ್ಲ ತರ್ಕಬದ್ಧ ರೀತಿಯಲ್ಲಿ ಕೆಲವು ಪೌರಾಣಿಕ ಕಥಾ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದನ್ನು ಸುಮ್ಮನೆ ಗುಂಪಿನಲ್ಲಿ ಕೂತು ಆಲಿಸುತ್ತಿದ್ದೆ. ಯಾವುದೇ ಪೌರಾಣಿಕ ವಿಷಯವಿರಲಿ, ಅದನ್ನು ಕೂಲಂಕುಷವಾಗಿ ಚರ್ಚಿಸಿ ಹಲವು ದೃಷ್ಟಿಕೋನಗಳನ್ನು ಕೇಳುಗರಿಗೆ ತೋರಿಸಿಕೊಡುವ ಸಾಮರ್ಥ್ಯ ಅವರಲ್ಲಿತ್ತು. ಹೆಚ್ಚಿನ ಸಲ ಅವರ ವಾದ-ಪ್ರತಿವಾದಗಳಿಗೆ ಆಧಾರ ರನ್ನನ ಮಹಾಭಾರತ ಇಲ್ಲವೇ ಕುಮಾರವ್ಯಾಸನ ಕಥಾಮಂಜರಿ ಆಗಿರುತ್ತಿದ್ದವು. ನಾ ಕೇಳಿದ ಕಥೆಗಳಲ್ಲಿ ಒಂದು ಪ್ರಸಂಗ ಇನ್ನೂ ಹಸಿಯಾಗಿ ನೆನಪಿದೆ.... (ಇನ್ನೂ ಇದೆ)


- uShai

(Poem) ಎನ್ನ ಮನದನ್ನೆ - ೧

ಮರೆತು ಬಿಡುವುದು ಹೇಗೆ ಹೇಳು ನಿನ್ನ
ತಂಪೆರಚುವ ಸವಿ ನೆನಪ ಕುರುಹುಗಳ
ಆಗಾಗ ಬಂದು ಕಾಡುತಿಹ ಕನಸುಗಳ ||ಪ||

ಕಾರ್ಮೋಡದ ಸುಳಿ ಮಿಂಚ ಕಂಡೆ ಆ ಕಂಗಳಲಿ
ನೀರ ಬಿಂದಿಗೆ ಪಿಡಿದು ಹೂಬನದ ಕಡೆ ನಡೆದಿಹ ನೀರೆ
ಹಿಂತಿರುಗಿ ನನ್ನೆಡೆಗೆ ನೋಡಿದಾ ಅರೆ ಕ್ಷಣದಿ ||

ಕಾದಿದ್ದೆ ನಾನಂದು ದೇವ ಗುಡಿ ಅಂಗಳದಿ
ಹೂವಬಟ್ಟಲ ಹಿಡಿದು ಬರುವೆಯೆಂದು
ದಿನ ಕಳೆದು ಸಂಜೆಯಾಯ್ತು ನಿನ್ನ ಸುಳಿವಿಲ್ಲ ಇನಿತು ||

ಇಂದಾದರೂ ನೀ ಬರುವೆ ಆಸೆಗೋಪುರವನೇ ಕಟ್ಟಿರುವೆ
ಬಂದೊಮ್ಮೆ ಎನ್ನೆದೆಯ ದೀಪವನು ಬೆಳಗಿಸೆಯಾ
ಕುಡಿನೋಟದಿ ಸನ್ನೆಯಲಿ ಸಮ್ಮತಿಯ ಸೂಚಿಸೆಯಾ ||

- uShai

Is Story Mein Emotion Hai, Drama Hai, Tragedy Hai

ಸಿನೆಮಾ ಜಗತ್ತಿನ ಆಗುಹೋಗುಗಳ ಬಗ್ಗೆ ನನ್ನಂತೆ ನಿಮಗೂ ಆಸಕ್ತಿ ಇದ್ದಲ್ಲಿ ಈ ವಿಷಯ ನೀವೂ ಗಮನಿಸಿರಬಹುದು. ಯಾವುದೇ ಸಿನೆಮಾ ಬಿಡುಗಡೆ ಆಗುವ ಮೊದಲು ಯಾ ಆದ ಕೂಡಲೇ ಬರುವ ಸಂದರ್ಶನಗಳಲ್ಲಿ ಪತ್ರಕರ್ತರು ನಾಯಕ-ನಾಯಕಿ,ನಿರ್ದೇಶಕ-ನಿರ್ಮಾಪಕರಿಗೆ ಹಾಕುವ ಸಾಮಾನ್ಯ ಸವಾಲು 'ಈ ಸಿನೆಮಾ ಬಗ್ಗೆ ನಿಮ್ಮ ಅಭಿಪ್ರಾಯವೇನು?..' ಅಥವಾ 'ನಿಮ್ಮ ಪಾತ್ರದ ಬಗ್ಗೆ ಹೇಳ್ತೀರಾ?'. ಉದಯ್ನೋನ್ಮುಖ ಕಲಾವಿದನಿರಲಿ ಅಥವಾ ಈಗಾಗಲೇ ಹತ್ತಾರು-ನೂರಾರು ಸಿನೆಮಾಗಳಲ್ಲಿ ನಟಿಸಿರಲಿ, ಏನೂ ಹೆಚ್ಚಿನ ಅಂತರವಿಲ್ಲ ಬಿಡಿ, ಕೊಡುವ ಉತ್ತರ ಒಂದೇ-'ಈ ಚಿತ್ರದಲ್ಲಿ ನನಗೆ ತುಂಬಾ ಭಿನ್ನವಾದ ಪಾತ್ರವಿದೆ....ಹೊಸ ಬಗೆಯ ಕಥೆಯಿದೆ...'ಇತ್ಯಾದಿ ಇತ್ಯಾದಿ. ಅರ್ಥಾತ್ ದಿನನಿತ್ಯ ಬರುವ ದೂರದರ್ಶನದ ಹವಾಮಾನ ವರದಿಗೂ (ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ?!) ಇವರು ಕೊಡುವ ಉತ್ತರಕ್ಕೂ ಬಲು ಹತ್ತಿರದ ಸಾಮ್ಯತೆಯಿದೆ ಎನ್ನಬಹುದು- ಅದೇ ರಾಗ ಅದೇ ಹಾಡು. ಪ್ರಶ್ನೆಗೆ ಮತ್ತದೇ ಉತ್ತರ ಹಲವು ಬಗೆಯಲ್ಲಿ ನಾಯಕ-ನಾಯಕಿಯರು ತಂತಮ್ಮ ಶೈಲಿಯಲ್ಲಿ ವಿವರಿಸಿದರೂ, ಶ್ರೀ ಸಾಮಾನ್ಯ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಹೀಗೆ ಹೇಳಬಹುದಲ್ವಾ ? -'ಇಸ್ ಸ್ಟೋರಿ ಮೆ ಇಮೋಶನ್ ಹೆ, ಡ್ರಾಮಾ ಹೆ, ಟ್ರಾಜೆಡಿ ಹೆ'! ನೀವೇನಂತೀರಾ?


- uShai

Whats there in this Blog?

Destination for Kannada Lovers - "Sweet Home for Kannada Poems, Articles, Thoughtful Quotes"

uShai