Tuesday, March 23, 2010

ಹೀಗೊಂದು ಪ್ರೇಮ ಪತ್ರ!

ನನ್ನವಳಿಗೆ,

ನೀನು ಹೋಗಿ ಕೇವಲ ೪ ದಿನಗಳಾಯಿತಷ್ಟೆ ಇವತ್ತಿಗೆ. ಇದೇನು ಮೊದಲ ಸಲವಲ್ಲ ನಾನೊಬ್ಬನೇ ನೀನಿಲ್ಲದೆ ಇದ್ದಿದ್ದು. ಆದರೂ ಈ ಸಲ ಅದೇನೋ ಮನಸಿಗೆ ಅರಿವಾದಂತಿದೆ.. ನೀನಿಲ್ಲ ಬಳಿಯಲ್ಲಿ ಅನ್ನುವ ಅನಿಸಿಕೆ; ಎದೆಯೊಳಗೆ ಹೇಳಲಾಗದ ಚಡಪಡಿಕೆ. ನೀನು ನನಗೆ ಕೇಳಿದ ಹಲವು ಪ್ರಶ್ನೆಗಳಿಗೆ ಈ ಪರಿಯಲ್ಲಿ ಮರುತ್ತರ ನೀಡುತ್ತಿರಬಹುದೇ ನನ್ನಂತರಾಳ?

ನಾನು ಮೂಲತಃ ಮನದಾಳ ವ್ಯಕ್ತ ಪಡಿಸುವವನಲ್ಲ; ಅದು ನಿನಗೂ ಗೊತ್ತು ಅಲ್ಲವೇ? ಹಾಗೆಯೇ ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದಿಸದ ಒರಟನೂ ಅಲ್ಲ ಅನ್ನುವುದು ಸಹ ನಿನಗೆ ಗೊತ್ತಿರದೇ? ಒಂಥರಾ ವಿವರಿಸಲಾಗದ ನಾಚಿಕೆ ಅಂದರೂ ತಪ್ಪಲ್ಲ. ನೀನು ಅದಕ್ಕೆ ತದ್ವುರುದ್ಧ. ಕ್ಷಣ ಕ್ಷಣಕೂ ಮನಸ್ಸನ್ನೇ ಬಿಚ್ಚಿ ಮಾತಾಡಬಲ್ಲವಳು.. ಜೀವನ ಪ್ರೀತಿಯನ್ನು ಮೈದೂಡಿಸಿಕೊಂಡವಳು. ನನ್ನಿಂದಲೂ ಅದೇ ರೀತಿಯ ಪ್ರತಿಕ್ರಿಯೆ ನೀನು ಬಯಸುವುದು ತಪ್ಪೇನೂ ಅಲ್ಲ. ಆದರೆ ಪ್ರೀತಿ ಒಲವಿನ ವಿಷಯ ಬಹಿರಂಗವಾಗಿ ಪದಗಳ ಮೂಲಕ ಹೇಳದಿದ್ದರೂ ನನ್ನ ಒಡನಾಟದಲ್ಲಿ ನಿನಗೆ ತೋರಿ ಬರಲಿಲ್ಲವೇ? ಎಲ್ಲವೂ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇದೆಯೇ? ಅಷ್ಟಕ್ಕಾಗಿ ನನ್ನಲ್ಲಿ ಸಿಟ್ಟು ನೀನು ತೋರುವುದು ನ್ಯಾಯವೇ? ನೋಡು.. ಹೀಗಿದ್ದರೂ ಲೇಖನಿ ಹಿಡಿದು ನಿನಗಾಗಿ ಪದಗಳ ಜೋಡಣೆಗೆ ತೊಡಗಿದ್ದೇನೆ. ಸತಿಗಾಗಿ ಇಂದು ಕವಿಯಾಗ ಹೊರಟಿದ್ದೇನೆ ನಾನು..

ಇಷ್ಟೇ ಹೇಳಬಲ್ಲೆ ನನ್ನ ಒಲವಿನ ಹೂವಿಗೆ...

ನೀನಿಂದು ತುಂಬಾ ನೆನಪಾಗುತ್ತಿರುವೆ ನನ್ನವಳೇ
ನಿನ್ನ ಕಾಲ್ಗೆಜ್ಜೆಯ ದನಿ ಅತ್ತಿತ್ತ ಸುಳಿವಾಗ
ನಿನ್ನ ತುಟಿಯಂಚಿನ ನಗು ಕಣ್ಣಂಚಿನ ಹುಸಿಗೋಪ
ಹುಡುಕಾಡುತಿರುವೆ ಇಂದು ಹೋದಲ್ಲಿ ಬಂದಲ್ಲಿ
ನನ್ನೊಳಗಿನ ಪ್ರೇಮಕ್ಕೆ ನಿನಗೇಕೆ ಬೇಕು ಬೇರೆ ಕನ್ನಡಿ?
ಮೌನರಾಗದಲಿ ವಸಂತಗಾನ ಮೂಡಿರಲು ||

ನಿನ್ನ ಬರುವುಗಾಗೇ ಕಾಯುತ್ತಿರುವ,

ಇಂತಿ,
ನಿನ್ನವ.


-uShai.

Wednesday, March 17, 2010

ಮನ - ಮಾತು - ಮೌನ - ಜೀವನ

"ಮಾತು ಬೆಳ್ಳಿ ಮೌನ ಬಂಗಾರ" - ಅನ್ನುವುದು ಅಕ್ಷರಶಃ ನಿಜ. ಆದರೆ ಮಾತುಗಳ ಮಧ್ಯೆ ಮೌನ ...?

ಮಾತಿನ ವರಸೆ ತನ್ನ ವಲಯ ಮಿತಿಯ ಮೀರಿದರೆ ಸಂಪೂರ್ಣ ಬೇರೆಯ ಅರ್ಥದ ಕಲ್ಪನೆ ಕೊಡುತ್ತದೆ. ಆದರೆ ಕೆಲವು ಪರಿಸ್ಥಿತಿಯಲ್ಲಿ ಮೌನವಾಗಿರುವುದೇ ಮತ್ತಷ್ಟು ಅನರ್ಥ ಉಂಟುಮಾಡಬಹುದು. ತಾನು ಏನನ್ನು ಅರ್ಥೈಸಿಕೊಂಡೆ ಅನ್ನುವುದನ್ನು ಕೇಳುಗ ಬಿಡಿಸಿ ಹೇಳಿದರೆ ಮತ್ತೊಮ್ಮೆ ಮಾತಿನ ’ನಿಜ ಅರ್ಥ’ ಎನೆಂದು ವಿವರಿಸಿ ಹೇಳಲು ಸಾಧ್ಯವಷ್ಟೇ? ಏನೂ ಅನ್ನದೆ ಸುಮ್ಮನೆ ಮನದೊಳಗೆ ಸಿಟ್ಟಿನ ಕಡಲೆ ಜಗಿದರೆ...? ಇದಕ್ಕೇ ಇರಬೇಕು , ಮಾತು ಬಲ್ಲವಗೆ ಜಗಳವಿಲ್ಲ ಅಂತ ಹಿರಿಯರು ಅಂದಿದ್ದು.

ಮನಸ್ಸೆನ್ನುವುದು ಮರ್ಕಟ ಹೌದು. ಅದರೂ ಮಾತು-ಮೌನ ಮನಸ್ಸಿಗೇ ಕನ್ನಡಿ ಆದರೆ ಬಲು ಚೆಂದ. ಆಡುವ ಮಾತು ಮುತ್ತಿನಂತಿದ್ದು ಅಂತರಂಗದಲಿ ಮಾರಿ ಹಬ್ಬ ಹೋಳಿಯಾಟ ನಡೆದರೆ ಚೆನ್ನವೇ? ಆದ್ದರಿಂದ ತಪ್ಪಿರಲಿ ಏನೇ ಆಗಲಿ.. ಮನದೊಳಗೆ ಏನನ್ನಿಸುವುದೋ ಮಾತಲ್ಲೂ ಅದೇ ಬಂದರೆ ಎಷ್ಟೋ ಸಂಬಂಧಗಳ ನಡುವೆ ತಪ್ಪು ಕಲ್ಪನೆಗೆ ಅವಕಾಶವೇ ಇರದು. ಒಮ್ಮೆಗೆ ಕೇಳಲು ಅಪ್ರಿಯವೆನಿಸಿದರೂ ಸತ್ಯ,ವಿಶ್ವಾಸಗಳೇ ಸಂಬಂಧಗಳ ಶಾಶ್ವತ ಅಡಿಪಾಯವಾಗಲಿ ಎನ್ನುವುದೇ ನನ್ನ ಹಾರೈಕೆ.

ಹೊಸ ವರುಷ ಶುರು ಮಾಡುವ ಮುನ್ನ ಇದೊಂದು ಮೂಲಮಂತ್ರ ಜೀವನದಿ ಅಳವಡಿಸಿಕೊಳ್ಳುವಂತಾಗಲಿ ಎಲ್ಲರೂ....

ಸರ್ವೇ ಜನಾಃ ಸುಖಿನೋ ಭವಂತು ||

-

Saturday, March 06, 2010

ಪ್ರೀತಿ ಸಂಬಂಧಗಳನ್ನೊಮ್ಮೆ ಭೆಟ್ಟಿಯಾದಾಗ...

ನಿನ್ನೆಯಷ್ಟೇ ಊರಿಂದ ವಾಪಸ್ಸು ಬಂದೆ. ಇಂದು ಅದೇನೋ ಕಳಕ್ಕೊಂಡು ಬಂದಂತೆ ಅನಿಸಿಕೆ.. ಮನದೊಳಗೆ ಅರಿಯದ ಸಂಕಟ. ಜೀವನ ಅಂದ್ರೆ ಹೀಗೇನೇ ಅಲ್ವಾ?. ತನ್ನವರನ್ನು ಬಹಳ ಕಾಲದ ಮೇಲೆ ಭೆಟ್ಟಿ ಮಾಡಿದ್ದು ಅದೆಷ್ಟು ಮನಕ್ಕೆ ಖುಷಿ ಕೊಟ್ಟಿತ್ತು ಅಂತ ಇವತ್ತು ಅರ್ಥ ಆಗ್ತಿದೆ. ಮನೆಯಲ್ಲೇ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ರಿಂದ ಎಲ್ಲಾ ಇಷ್ಟರು,ನೆಂಟರನ್ನೂ ಒಂದೇ ಜಾಗದಲ್ಲಿ ನೋಡುವಂತಾಯ್ತು. ಅಂದದ ಸೀರೆ ಉಟ್ಟು ಕೊರಳು ಕೈ ತುಂಬಾ ಚಿನ್ನಾಭರಣ ತೊಟ್ಟು ಕಾರ್ಯಕ್ರಮವಿಡೀ ಓಡಾಡಿದ್ದು ಒಂದು ಸುಂದರ ನೆನಪಷ್ಟೇ ಈವಾಗ...

ಕೆಲವರನ್ನಂತೂ ಈ ಕಾರ್ಯಕ್ರಮದಲ್ಲೇ ಮೊದಲ ಸಲ ನಾನು ಭೆಟ್ಟಿಯಾಗಿದ್ದು. ಆದರೂ ಎಷ್ಟೋ ವರುಷದ ಪರಿಚಯವೋ ಎಂಬಂತೆ ಅದೇನೋ ಅರಿಯದ ಬಂಧ ಬೆಳೆದಿತ್ತು ಒಂದು ದಿನದ ಒಡನಾಟದಲ್ಲೇ... ಸಂಜೆ ಕಾರ್ಯಕ್ರಮ ಮುಗಿದ ಮೇಲೆ ಅವ್ರನ್ನು ಬೀಳ್ಕೊಡುವಾಗ ಭಾವೋದ್ವೇಗ ಉಕ್ಕಿ ಬಂದಂತೆ ಅನಿಸಿತ್ತು... ಮನಸು ಮೌನವಾಗಿತ್ತು... ಕಣ್ಣಂಚಿನ ಹನಿಗಳು ನೂರು ಮಾತುಗಳನ್ನಾಡಿದ್ದವು.

ಅವರೆಲ್ಲರ ಪ್ರೀತಿ ವಿಶ್ವಾಸಗಳನ್ನು ಮನದಲ್ಲಿ ತುಂಬಿಕೊಂಡು ದೂರದ ದೇಶಕ್ಕೆ ಮತ್ತೆ ಮರಳಿದ್ದೇನೆ... ಮತ್ತೊಮ್ಮೆ ಅವರೆಲ್ಲರ ಭೇಟಿಯಾಗುವ ಭರವಸೆಯ ಹೊತ್ತು... ಇರುವುದೆಲ್ಲವ ಬಿಟ್ಟು ಇಲ್ಲದಿರುವುದರ ಕಡೆಗೆ ನಡೆವುದೇ ಜೀವನ ಅಲ್ವೇ?

- uShai