Friday, August 20, 2010

Myers Briggs Personality Types

ಎಷ್ಟೋ ದಿನದಿಂದ ಇದರ ಬಗ್ಗೆ ಬರೆಯಬೇಕು ಅಂದುಕೊಂಡಿದ್ದೆ. ಅಂತೂ ಇವತ್ತು ದಿನ ಕೂಡಿ ಬಂತು ನೋಡಿ. ಸೈಕಾಲಜಿ ಬಗ್ಗೆ ನನಗೆ ಮೊದಲಿಂದಲೇ ಅತಿಯಾದ ಅಭಿರುಚಿ. ಅದರ ಬಗ್ಗೆ ಎಲ್ಲ ವಿಷಯಗಳು ನಾನು ಓದಿ ತಿಳಿದುಕೊಂಡಿದ್ದು ಅಷ್ಟೆ, ಅದರ ಬಗ್ಗೆ ಸೀರಿಯಸ್ಸಾಗಿ ಸ್ಕೂಲಿಗೆ ಹೋಗಿ ಕಲಿತಿಲ್ಲ ಏನನ್ನೂ ಇದುವರೆಗೆ. ಸರಿ ಅದಿರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ...

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳು ( Zodiac Signs ) ಇರುವಂತೆ ಈ ಜಗತ್ತಿನಲ್ಲಿ 16 ನಮೂನೆಯ ಜನರಿರುತ್ತಾರೆ ಎನ್ನುವ ವಿಷಯ ನಿಮಗೆ ಗೊತ್ತೇ? ಅದನ್ನೇ ’ Personality Types ’ ಅನ್ನುವುದು. ಇದು ಸುಮ್ಮನೆ ಆಧಾರಗಳಿಲ್ಲದ ವಿಚಾರವಲ್ಲ; ೪೦ ವರುಷಗಳ ಸಂಶೋಧನೆಯ ಫಲ. ಯಾವುದೇ type ಕೆಟ್ಟದೂ ಅಲ್ಲ ಅಥವಾ ಅತಿಯಾಗಿ ಒಳ್ಳೆಯದೂ ಅಲ್ಲ. ಇದರ ಮೂಲ ಉದ್ದೇಶ ಒಂದು ಬಗೆಯ ಜನರು ಇನ್ನೊಂದು ಬಗೆಯ ಜನರೊಡನೆ ಸಮರಸದಿಂದ ಇರುವುದು ಹೇಗೆ ಎನ್ನುವ ’ಮೂಲಸೂತ್ರ’ ಒದಗಿಸಿಕೊಡುವುದು. ಇದರ ಬಗ್ಗೆ ನನಗೆ ಜಾಸ್ತಿ ಬರೆಯಲು ಇಷ್ಟ ಇಲ್ಲ. ಯಾಕೆಂದರೆ ಇದರ ಬಗ್ಗೆ ಸಾವಿರಾರು ಲಿಂಕುಗಳು ನಿಮಗೆ ಗೂಗಲಿಸಿ ನೋಡಿದರೆ ದೊರೆಯುತ್ತವೆ. ಓದಿ ನೋಡಿ.. ಒಂದು ಲಿಂಕು ನಿಮಗಾಗಿ ಕೊಡುತ್ತಿದ್ದೇನೆ..

ಇನ್ನೂ ಹೀಗೆ ನನಗೆ ತಿಳಿದಿರುವ ವಿಷಯಗಳನ್ನು ಹಂಚಿಕೊಳ್ಳುತ್ತೇನೆ ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ..ಮೊತ್ತೊಂದು ಹೊಸ ವಿಷಯದೊಡನೆ...

Ref: http://en.wikipedia.org/wiki/Myers-Briggs_Type_Indicator

- ಉಷೈ

Thursday, August 12, 2010

’ಮಳೆ-ಕನಸಿನ ದಿನ’

ಆವತ್ತು ಮಳೆ ಧಾರಾಕಾರವಾಗಿ ಹೊರಗೆ ಸುರಿಯುತ್ತಿತ್ತು. ಮನೆಯ ಹಿಂಬದಿಯ ಬಾಲ್ಕನಿ ಬಾಗಿಲು ಮೆಲ್ಲಗೆ ಸರಿಸಿ ಸ್ವಲ್ಪ ಹೊತ್ತು ಹೊರಗೆ ನೋಡುತ್ತಾ ನಿಂತೆ.. ಮರದ ಡೆಕ್ಕಿನ ಮೇಲೆ ಪಟ ಪಟ ಸದ್ದು ಮಾಡುತ್ತ ಬೀಳುವ ಹನಿಗಳು ಅಚ್ಚ ಹೊಸ ತಾಳದಲ್ಲಿ ಒಂದೇ ಸಮನೆ ಸಂಗೀತ ನುಡಿಸಿದಂತೆ ಅನಿಸಿತು. ನನ್ನ ಮೂರು ವರುಷದ ಮಗಳು ತಾನು ಹಿಡಿದಿದ್ದ ಕೊಡೆಯನ್ನು ಗಿರಗಿರನೆ ತಿರುಗಿಸಿ ಹನಿಗಳು ನನ್ನ ಮುಖಕ್ಕೆ ಬಿದ್ದಾಗಲೇ ನನ್ನ ಕನಸಿನ ಪುರವಣಿಗೆ ತೆರೆ ಬಿದ್ದಿದ್ದು. ಅವಳು ಆಚೇಚೆ ಓಡಾಡುತ್ತ ಮಳೆ ಹನಿಗಳೊಂದಿಗೆ ಮುಟ್ಟಾಟ ಆಡುತ್ತಿರುವಳೋ ಎಂದು ಭಾಸವಾಯಿತು. ಒಂದೆಡೆಗೆ ನನಗೆ ಅವಳಂತೆ ಮಳೆಯಲ್ಲಿ ನೆನೆದು ಮುಕ್ತವಾಗಿ ಹನಿಗಳೊಡನೆ ಚಕ್ಕ್ಂದವಾಡಲು ಸಾಧ್ಯವಿಲ್ಲದಿದ್ದುದರ ಬಗ್ಗೆ ಅಸೂಯೆಯ ಭಾವನೆ ಹೀಗೆಯೇ ಸುಳಿಯಿತು ಮನದೊಳಗೆ. ಹಿತ್ತಲಿಗಂಟಿಕೊಂಡು ಇರುವ ಆ ಅಂಕುಡೊಂಕಾದ ಮರ ಗಾಳಿಯ ರಭಸಕ್ಕೆ ಕುಡಿತದ ಅಮಲಿಗೆ ತೂಗುವಂತೆ ಅತ್ತಿತ್ತ ಅಲ್ಲಾಡುತ್ತಿತ್ತು. ಅದರ ಎಲೆಗಳ ಮೇಲೆ ಬಿದ್ದ ಹನಿಗಳು ಪುಟ್ಟ ಮಕ್ಕಳು ಜಾರುಬಂಡಿಯಲಿ ಕೂತು ಜಾರಿದಂತೆ ನೆಲಕ್ಕೆ ಜಾರಿ ಬೀಳುತ್ತಿದ್ದವು.

ಆಸೆ ಹೊತ್ತು ತಂದ ಮಳೆಹನಿಗಳು
ಮನದ ಬಾಗಿಲ ತಟ್ಟಿ ಭುವಿಗರ್ಪಿತವಾದವು
ಎಲೆಗಳ ಮೇಲೆ ಸ್ಪಟಿಕಮಣಿಗಳಂತೆ ತೋರಿ
ಕ್ಷಣದಲ್ಲೇ ಜಾರುತಲಿ ಮಾಯವಾದವು ಯಾಕೋ..

ಕಪ್ಪು ದಟ್ಟವಾದ ಮೋಡಗಳ ಮಧ್ಯದಿಂದ ಸೂರ್ಯ ತನ್ನ ಕಿರಣಗಳ ಸೂಸಲು ಅತಿಯಾಗಿ ಕಷ್ಟ ಪಡುತ್ತಿರುವನೋ ಎಂಬಂತೆ ಕಾಣುತ್ತಿತ್ತು. ಮಳೆಯ ನೀರಿನ ರಭಸಕ್ಕೋ ಏನೋ ಡೆಕ್ಕಿನ ಕೆಳಗೆ ಸಮೀಪದಲ್ಲೇ ಪುಟ್ಟ ಕಾಲುವೆಯಲ್ಲಿ ನೀರು ಹರಿದುಹೋಗಲು ಶುರುವಾಗಿತ್ತು. ಮಗಳು ’boat ಮಾಡಿಕೊಡು’ ಅಂದಾಗ ಬಾಲ್ಯದ ಒಂದೊಂದು ಕ್ಷಣಗಳು ಕಣ್ಣೆದುರೇ ಮೂರ್ತಿವೆತ್ತಂತೆ ಕಾಡಿದವು ಯಾಕೋ ಆ ಹೊತ್ತಿಗೆ.. ಮಳೆಯಲ್ಲಿ ನೆನೆದು ತೊಯ್ದು ಮನೆಯೊಳಗೆ ಬಂದಾಗ ’ಅಯ್ಯಯ್ಯೋ.. ಎಲ್ಲ ಕೊಚ್ಚೆ ಮನೆ ಒಳಗೆ ತರ್ಬೇಡ..ತಲೆ ಒರೆಸ್ತೀನಿ ಬಾ..ಶೀತ ಆಗುತ್ತೆ’ ಅನ್ನುತ್ತಿದ್ದ ಅಮ್ಮನ ಪ್ರೀತಿ,ಕಳವಳ ತುಂಬಿಕೊಂಡ ಗದರಿಕೆಯ ಮಾತುಗಳು ಕಿವಿಯೊಳಗೆ ಗೊಯ್ಯ್‍ಗುಟ್ಟಿದವು ಒಮ್ಮೆ.. मुजकॊ लॊटा दो बचपन का सावन ... वो कागज़ कि कष्टी .. वॊ बारिश का पानि..

ಮರೀಚಿಕೆಯಂತೆ ಅಲ್ಲವೇ ಆ ಸುಂದರ ದಿನಗಳು
ಮುಗ್ಧತೆಯ ಮುಗುಳುನಗು ಆಟಪಾಠಗಳ ಬಿರುಸು
ಒಂದೊಂದು ಘಟನೆಯೂ ಆಹಾ ಅದೆಂಥಹ ಸೊಗಸು ||

ನೀರುಳ್ಳಿ ಬಾಜಿ ಮಾಡಲೆಂದು ಒಲೆಯ ಮೇಲಿಟ್ಟ ಎಣ್ಣೆಯು ಕೊತಕೊತನೆ ಕುದಿದು ಚಟಪಟಗುಟ್ಟಿದಾಗಲೇ ಮಳೆಕನಸಲ್ಲಿ ಮುಳುಗಿದ್ದ ನನಗೆ ಇಹಪ್ರಪಂಚದ ಬಗ್ಗೆ ಅರಿವಾಗಿದ್ದು. ಕೈಯಲ್ಲಿದ್ದ ಗ್ಲಾಸು ನೋಡಿದರೆ ತಣ್ಣಗಾಗಿದ್ದ ’morning coffee’ ಅಣಕಿಸಿ ನಗಾಡಿತು. ಕನಸುಗಳನ್ನೆಲ್ಲ ಮತ್ತೆ ನನ್ನ ಮನದ ಬುಟ್ಟಿಯೊಳಗಿಟ್ಟು ಅಡುಗೆಕೋಣೆಯ ಕಡೆಗೆ ಧಾವಿಸಿದೆ.

ಕನಸುಗಳಿಗೆ ಮತ್ತೆ ಹಬ್ಬ ಇನ್ನೊಮ್ಮೆ ಮಳೆರಾಯ ಭೇಟಿ ಕೊಟ್ಟಾಗ..

- ಉಷೈ

Monday, April 05, 2010

ಆಚಾರವಿಲ್ಲದ ನಾಲಿಗೆ !

ಈ ವಾರದ ವಿಜಯಕರ್ನಾಟಕದ ಸಂಚಿಕೆಯಲ್ಲಿ ಬೆಳೆಗೆರೆ ಬರೆದ ಲೇಖನ ಓದಿದೆ ’madness habits' ಕುರಿತಾಗಿ. ಒಂದೊಂದು ಅಕ್ಷರವೂ ನಿಜ ಅಂತ ಅನ್ನಿಸ್ತು ನನಗೆ.

ನನ್ನ ಪ್ರಕಾರ ಈ ಜಗತ್ತಲ್ಲಿ ಎಲ್ಲರಿಗೂ ಒಂದೊಂದು ರೀತಿಯ ’ಹುಚ್ಚು’ ಅಂದರೆ ತಪ್ಪೆನಿಸದು! ಕೆಲವರಿಗೆ ಓದುವ ಹುಚ್ಚು; ಡಿಗ್ರಿಯ ಮೇಲೆ ಡಿಗ್ರಿ ಪಡೆಯುವ ಹುಚ್ಚು;ಇನ್ನು ಕೆಲವರಿಗೆ ದುಡ್ಡಿನ ಹುಚ್ಚು. ಹೆಣ್ಣು, ಹೊನ್ನು, ಮಣ್ಣು... ಇನ್ನೇನೋ...

ಈಗ ನಾನಿಲ್ಲಿ ಮಾತನಾಡಲು ಹೊರಟಿದ್ದು ’ಮಾತಿನ ಹುಚ್ಚು’ ಇರುವವರ ಬಗ್ಗೆ. ಇವರಿಗೆ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಿಕೊಳ್ಳುವುದೇ ಒಂದು ಗೀಳು. ಯಾರದೇ ಮನೆಗೆ ಭೇಟಿ ನೀಡಲಿ, ಅಥವಾ ಮದುವೆ ಮುಂಜಿ ಸಮಾರಂಭಗಳಿಗೆ ಹೋಗಿ ಬರಲಿ, ಅಲ್ಲಿನ ಲೋಪ ದೋಷಗಳನ್ನು ಎತ್ತಿ ಹಿಡಿದು ಮಾತನಾಡದಿದ್ರೆ ರಾತ್ರಿ ನಿದ್ದೆ ಬಾರದು ಇಂಥವರಿಗೆ! ಆದರೆ ಇವರ ’ತಪ್ಪು ಹುಡುಕೋ ಪಾಲಿಸಿ’ ಹೊರಗಿವನರಿಗೆ ಮಾತ್ರ; ತಮಗೆ ಹತ್ತಿರದ ಜನರ ಬಗ್ಗೆ ಸಂಪೂರ್ಣ ಸ್ಪೆಷಲ್ಲು ಡಿಸ್ಕೌಂಟು ಇದೆ! ಅದೇನೋ ಗಾದೆಮಾತು ಇದೆಯಲ್ಲ; ತಮ್ಮ ಕಾಲಬದಿ ಆನೆ ಸತ್ತರೂ ಕಾಣದು ಆದರೆ ಪಕ್ಕದ ಮನೆಲಿ ಇರುವೆ ಸತ್ತ ಬಗ್ಗೆ ಟೀಕೆ ಮಾಡಿದ ಹಾಗೆ.

ನಮ್ಮ ಸುತ್ತ ಮುತ್ತ ಇಂಥಹ ಜನರು ಎಷ್ಟೋ ಸಲ ಕಾಣಲು ಸಿಗಬಹುದು. ಇಂಥವರನ್ನು ಸರಿ ಪಡಿಸಲು ಯಾವ ಔಷಧಿ, ಬೇರು ಕಷಾಯ ಸಿಗದು. ಕಾಲಧರ್ಮವೇ ಪಾಠ ಕಲಿಸಿದರೆ ಸರಿ.

’ಆಚಾರವಿಲ್ಲದ ನಾಲಿಗೆ.. ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ..’!!

- uShai

Tuesday, March 23, 2010

ಹೀಗೊಂದು ಪ್ರೇಮ ಪತ್ರ!

ನನ್ನವಳಿಗೆ,

ನೀನು ಹೋಗಿ ಕೇವಲ ೪ ದಿನಗಳಾಯಿತಷ್ಟೆ ಇವತ್ತಿಗೆ. ಇದೇನು ಮೊದಲ ಸಲವಲ್ಲ ನಾನೊಬ್ಬನೇ ನೀನಿಲ್ಲದೆ ಇದ್ದಿದ್ದು. ಆದರೂ ಈ ಸಲ ಅದೇನೋ ಮನಸಿಗೆ ಅರಿವಾದಂತಿದೆ.. ನೀನಿಲ್ಲ ಬಳಿಯಲ್ಲಿ ಅನ್ನುವ ಅನಿಸಿಕೆ; ಎದೆಯೊಳಗೆ ಹೇಳಲಾಗದ ಚಡಪಡಿಕೆ. ನೀನು ನನಗೆ ಕೇಳಿದ ಹಲವು ಪ್ರಶ್ನೆಗಳಿಗೆ ಈ ಪರಿಯಲ್ಲಿ ಮರುತ್ತರ ನೀಡುತ್ತಿರಬಹುದೇ ನನ್ನಂತರಾಳ?

ನಾನು ಮೂಲತಃ ಮನದಾಳ ವ್ಯಕ್ತ ಪಡಿಸುವವನಲ್ಲ; ಅದು ನಿನಗೂ ಗೊತ್ತು ಅಲ್ಲವೇ? ಹಾಗೆಯೇ ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದಿಸದ ಒರಟನೂ ಅಲ್ಲ ಅನ್ನುವುದು ಸಹ ನಿನಗೆ ಗೊತ್ತಿರದೇ? ಒಂಥರಾ ವಿವರಿಸಲಾಗದ ನಾಚಿಕೆ ಅಂದರೂ ತಪ್ಪಲ್ಲ. ನೀನು ಅದಕ್ಕೆ ತದ್ವುರುದ್ಧ. ಕ್ಷಣ ಕ್ಷಣಕೂ ಮನಸ್ಸನ್ನೇ ಬಿಚ್ಚಿ ಮಾತಾಡಬಲ್ಲವಳು.. ಜೀವನ ಪ್ರೀತಿಯನ್ನು ಮೈದೂಡಿಸಿಕೊಂಡವಳು. ನನ್ನಿಂದಲೂ ಅದೇ ರೀತಿಯ ಪ್ರತಿಕ್ರಿಯೆ ನೀನು ಬಯಸುವುದು ತಪ್ಪೇನೂ ಅಲ್ಲ. ಆದರೆ ಪ್ರೀತಿ ಒಲವಿನ ವಿಷಯ ಬಹಿರಂಗವಾಗಿ ಪದಗಳ ಮೂಲಕ ಹೇಳದಿದ್ದರೂ ನನ್ನ ಒಡನಾಟದಲ್ಲಿ ನಿನಗೆ ತೋರಿ ಬರಲಿಲ್ಲವೇ? ಎಲ್ಲವೂ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇದೆಯೇ? ಅಷ್ಟಕ್ಕಾಗಿ ನನ್ನಲ್ಲಿ ಸಿಟ್ಟು ನೀನು ತೋರುವುದು ನ್ಯಾಯವೇ? ನೋಡು.. ಹೀಗಿದ್ದರೂ ಲೇಖನಿ ಹಿಡಿದು ನಿನಗಾಗಿ ಪದಗಳ ಜೋಡಣೆಗೆ ತೊಡಗಿದ್ದೇನೆ. ಸತಿಗಾಗಿ ಇಂದು ಕವಿಯಾಗ ಹೊರಟಿದ್ದೇನೆ ನಾನು..

ಇಷ್ಟೇ ಹೇಳಬಲ್ಲೆ ನನ್ನ ಒಲವಿನ ಹೂವಿಗೆ...

ನೀನಿಂದು ತುಂಬಾ ನೆನಪಾಗುತ್ತಿರುವೆ ನನ್ನವಳೇ
ನಿನ್ನ ಕಾಲ್ಗೆಜ್ಜೆಯ ದನಿ ಅತ್ತಿತ್ತ ಸುಳಿವಾಗ
ನಿನ್ನ ತುಟಿಯಂಚಿನ ನಗು ಕಣ್ಣಂಚಿನ ಹುಸಿಗೋಪ
ಹುಡುಕಾಡುತಿರುವೆ ಇಂದು ಹೋದಲ್ಲಿ ಬಂದಲ್ಲಿ
ನನ್ನೊಳಗಿನ ಪ್ರೇಮಕ್ಕೆ ನಿನಗೇಕೆ ಬೇಕು ಬೇರೆ ಕನ್ನಡಿ?
ಮೌನರಾಗದಲಿ ವಸಂತಗಾನ ಮೂಡಿರಲು ||

ನಿನ್ನ ಬರುವುಗಾಗೇ ಕಾಯುತ್ತಿರುವ,

ಇಂತಿ,
ನಿನ್ನವ.


-uShai.

Wednesday, March 17, 2010

ಮನ - ಮಾತು - ಮೌನ - ಜೀವನ

"ಮಾತು ಬೆಳ್ಳಿ ಮೌನ ಬಂಗಾರ" - ಅನ್ನುವುದು ಅಕ್ಷರಶಃ ನಿಜ. ಆದರೆ ಮಾತುಗಳ ಮಧ್ಯೆ ಮೌನ ...?

ಮಾತಿನ ವರಸೆ ತನ್ನ ವಲಯ ಮಿತಿಯ ಮೀರಿದರೆ ಸಂಪೂರ್ಣ ಬೇರೆಯ ಅರ್ಥದ ಕಲ್ಪನೆ ಕೊಡುತ್ತದೆ. ಆದರೆ ಕೆಲವು ಪರಿಸ್ಥಿತಿಯಲ್ಲಿ ಮೌನವಾಗಿರುವುದೇ ಮತ್ತಷ್ಟು ಅನರ್ಥ ಉಂಟುಮಾಡಬಹುದು. ತಾನು ಏನನ್ನು ಅರ್ಥೈಸಿಕೊಂಡೆ ಅನ್ನುವುದನ್ನು ಕೇಳುಗ ಬಿಡಿಸಿ ಹೇಳಿದರೆ ಮತ್ತೊಮ್ಮೆ ಮಾತಿನ ’ನಿಜ ಅರ್ಥ’ ಎನೆಂದು ವಿವರಿಸಿ ಹೇಳಲು ಸಾಧ್ಯವಷ್ಟೇ? ಏನೂ ಅನ್ನದೆ ಸುಮ್ಮನೆ ಮನದೊಳಗೆ ಸಿಟ್ಟಿನ ಕಡಲೆ ಜಗಿದರೆ...? ಇದಕ್ಕೇ ಇರಬೇಕು , ಮಾತು ಬಲ್ಲವಗೆ ಜಗಳವಿಲ್ಲ ಅಂತ ಹಿರಿಯರು ಅಂದಿದ್ದು.

ಮನಸ್ಸೆನ್ನುವುದು ಮರ್ಕಟ ಹೌದು. ಅದರೂ ಮಾತು-ಮೌನ ಮನಸ್ಸಿಗೇ ಕನ್ನಡಿ ಆದರೆ ಬಲು ಚೆಂದ. ಆಡುವ ಮಾತು ಮುತ್ತಿನಂತಿದ್ದು ಅಂತರಂಗದಲಿ ಮಾರಿ ಹಬ್ಬ ಹೋಳಿಯಾಟ ನಡೆದರೆ ಚೆನ್ನವೇ? ಆದ್ದರಿಂದ ತಪ್ಪಿರಲಿ ಏನೇ ಆಗಲಿ.. ಮನದೊಳಗೆ ಏನನ್ನಿಸುವುದೋ ಮಾತಲ್ಲೂ ಅದೇ ಬಂದರೆ ಎಷ್ಟೋ ಸಂಬಂಧಗಳ ನಡುವೆ ತಪ್ಪು ಕಲ್ಪನೆಗೆ ಅವಕಾಶವೇ ಇರದು. ಒಮ್ಮೆಗೆ ಕೇಳಲು ಅಪ್ರಿಯವೆನಿಸಿದರೂ ಸತ್ಯ,ವಿಶ್ವಾಸಗಳೇ ಸಂಬಂಧಗಳ ಶಾಶ್ವತ ಅಡಿಪಾಯವಾಗಲಿ ಎನ್ನುವುದೇ ನನ್ನ ಹಾರೈಕೆ.

ಹೊಸ ವರುಷ ಶುರು ಮಾಡುವ ಮುನ್ನ ಇದೊಂದು ಮೂಲಮಂತ್ರ ಜೀವನದಿ ಅಳವಡಿಸಿಕೊಳ್ಳುವಂತಾಗಲಿ ಎಲ್ಲರೂ....

ಸರ್ವೇ ಜನಾಃ ಸುಖಿನೋ ಭವಂತು ||

-

Saturday, March 06, 2010

ಪ್ರೀತಿ ಸಂಬಂಧಗಳನ್ನೊಮ್ಮೆ ಭೆಟ್ಟಿಯಾದಾಗ...

ನಿನ್ನೆಯಷ್ಟೇ ಊರಿಂದ ವಾಪಸ್ಸು ಬಂದೆ. ಇಂದು ಅದೇನೋ ಕಳಕ್ಕೊಂಡು ಬಂದಂತೆ ಅನಿಸಿಕೆ.. ಮನದೊಳಗೆ ಅರಿಯದ ಸಂಕಟ. ಜೀವನ ಅಂದ್ರೆ ಹೀಗೇನೇ ಅಲ್ವಾ?. ತನ್ನವರನ್ನು ಬಹಳ ಕಾಲದ ಮೇಲೆ ಭೆಟ್ಟಿ ಮಾಡಿದ್ದು ಅದೆಷ್ಟು ಮನಕ್ಕೆ ಖುಷಿ ಕೊಟ್ಟಿತ್ತು ಅಂತ ಇವತ್ತು ಅರ್ಥ ಆಗ್ತಿದೆ. ಮನೆಯಲ್ಲೇ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ರಿಂದ ಎಲ್ಲಾ ಇಷ್ಟರು,ನೆಂಟರನ್ನೂ ಒಂದೇ ಜಾಗದಲ್ಲಿ ನೋಡುವಂತಾಯ್ತು. ಅಂದದ ಸೀರೆ ಉಟ್ಟು ಕೊರಳು ಕೈ ತುಂಬಾ ಚಿನ್ನಾಭರಣ ತೊಟ್ಟು ಕಾರ್ಯಕ್ರಮವಿಡೀ ಓಡಾಡಿದ್ದು ಒಂದು ಸುಂದರ ನೆನಪಷ್ಟೇ ಈವಾಗ...

ಕೆಲವರನ್ನಂತೂ ಈ ಕಾರ್ಯಕ್ರಮದಲ್ಲೇ ಮೊದಲ ಸಲ ನಾನು ಭೆಟ್ಟಿಯಾಗಿದ್ದು. ಆದರೂ ಎಷ್ಟೋ ವರುಷದ ಪರಿಚಯವೋ ಎಂಬಂತೆ ಅದೇನೋ ಅರಿಯದ ಬಂಧ ಬೆಳೆದಿತ್ತು ಒಂದು ದಿನದ ಒಡನಾಟದಲ್ಲೇ... ಸಂಜೆ ಕಾರ್ಯಕ್ರಮ ಮುಗಿದ ಮೇಲೆ ಅವ್ರನ್ನು ಬೀಳ್ಕೊಡುವಾಗ ಭಾವೋದ್ವೇಗ ಉಕ್ಕಿ ಬಂದಂತೆ ಅನಿಸಿತ್ತು... ಮನಸು ಮೌನವಾಗಿತ್ತು... ಕಣ್ಣಂಚಿನ ಹನಿಗಳು ನೂರು ಮಾತುಗಳನ್ನಾಡಿದ್ದವು.

ಅವರೆಲ್ಲರ ಪ್ರೀತಿ ವಿಶ್ವಾಸಗಳನ್ನು ಮನದಲ್ಲಿ ತುಂಬಿಕೊಂಡು ದೂರದ ದೇಶಕ್ಕೆ ಮತ್ತೆ ಮರಳಿದ್ದೇನೆ... ಮತ್ತೊಮ್ಮೆ ಅವರೆಲ್ಲರ ಭೇಟಿಯಾಗುವ ಭರವಸೆಯ ಹೊತ್ತು... ಇರುವುದೆಲ್ಲವ ಬಿಟ್ಟು ಇಲ್ಲದಿರುವುದರ ಕಡೆಗೆ ನಡೆವುದೇ ಜೀವನ ಅಲ್ವೇ?

- uShai

Tuesday, January 26, 2010

ನೆನಪುಗಳನ್ನೊಮ್ಮೆ ಕೆದಕಿದಾಗ...


ಕಳೆದು ಹೋದ ಸ್ಕೂಲಿನ ದಿನಗಳ ಬಗ್ಗೆ ನೆನಪಿಸಿಕೊಳ್ಳೋದೇ ಒಂದು ಮಜಾ ಅಲ್ವಾ? ಮೊನ್ನೆ ಹೀಗೆ ಅಚಾನಕ್ಕಾಗಿ ಸಿಕ್ಕಿದಳು ’ಹರಟೆ ಕಿಟಕಿ’ ಯಲ್ಲಿ ನನ್ನ ಕಾಲೇಜಿನ ಸಮಯದ ಗೆಳತಿಯೊಬ್ಬಳು. ಮಾತು ಸಂಭಾಷಣೆ ನನ್ನನ್ನು ಹಲವು ವರ್ಷ ಹಿಂದಕ್ಕೆ ಕರೆದೊಯ್ಯಿತು ಹೀಗೇನೇ....

ನಾನು PUC ಓದುತ್ತಿದ್ದ ಸಮಯವದು. ಮೊತ್ತ ಮೊದಲಿಗೆ ಅಪ್ಪ ಅಮ್ಮನಿಂದ ಮನೆಯಿಂದ ದೂರ.. ಹೊಸ ಜಾಗ, ಹೊಸ ಜನ ಹಾಸ್ಟೆಲಿನ ಜೀವನಕ್ಕೆ ಕಾಲಿಟ್ಟಿದ್ದೆ. ನಾವು ನಾಲಕ್ಕು ಜನ ( S,R,N,C) ಹಾಸ್ಟೆಲಿನಲ್ಲಿ ರೂಮ್ ಮೇಟ್ಸ್ ಆಗಿದ್ದೆವು. ಯಾವುದೇ ಗಲಾಟೆ ಗೌಜಿಗಳ ಜಂಜಾಟದಿಂದ ಬಲು ದೂರ ಇದ್ದಿದ್ರಿಂದಲೋ , ಆಗಾಗ ಊರಿಂದ ಬರುವಾಗ ತರುವ ಸ್ವೀಟ್ಸ್‍ಗಳನ್ನು ಅಲ್ಪ ಸ್ವಲ್ಪ ಕೊಡುತ್ತಿದ್ದರಿಂದಲೋ ವಾರ್ಡನ್‍ಗಂತೂ ನಮ್ಮನ್ನು ಕಂಡರೆ ಎನೋ ಅಚ್ಚುಮೆಚ್ಚು. ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಕಾಫಿ ತಿಂಡಿಗೆಂದು ವಾರ್ಡನ್ ನಮ್ಮ ರೂಮಿನ ಎದುರಾಗಿಯೇ ಹೋಗುತ್ತಿದ್ದುದು. ನಮ್ಮ ರೂಮಿನಲ್ಲಿ ಆ ಹೊತ್ತಿಗಾಗಲೇ ಎದ್ದು ಓದಲೆಂದು ಡೆಸ್ಕ್‍ನ ಎದುರು ಪ್ರತಿಷ್ಟಾಪನೆ ಆಗಿ ಬಿಡುತ್ತಿದ್ದೆವು. ಆದರೆ ಕುರ್ಚಿಯಲ್ಲೇ ಕೂತು ಆಗಾಗ ತೂಕಡಿಸುತ್ತಿದ್ದಿದ್ದು ವಾರ್ಡನ್‍ಗೆ ಗೊತ್ತಾಗಲೇ ಇಲ್ಲ ಕೊನೆವರೆಗೆ ಬಿಡಿ :-).ಗಲಾಟೆ ಸದ್ದಿಲ್ಲದ ಓದುವ ಹುಡುಗಿಯರೆಂಬ ಹಣೆಪಟ್ಟಿ ಕೊನೆವರೆಗೂ ಖಾಯಮ್ಮಾಗಿಯೇ ಇತ್ತು.

"N" ಒಬ್ಬಳ ಬಿಟ್ಟರೆ ನಾವು ಮೂರ್ವರೂ ೧೦ನೇ ತರಗತಿಯವರೆಗೆ ಕನ್ನಡ ಮೀಡಿಯಂ‍ನಲ್ಲಿ ಕಲಿತವರು ಅಂದ ಮೇಲೆ, PUCಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡ ನಮಗೆ ಭಾಷಾನುವಾದ ಮಾಡಿಕೊಂಡು ಪಾಠ ಅರ್ಥೈಸಿಕೊಳ್ಳುವುದು ಸ್ವಲ್ಪ ದೊಡ್ಡ ಮಟ್ಟಿನ ಕಬ್ಬಿಣದ ಕಡಲೆ ತರವೇ ಅನಿಸಿತ್ತು ಎಂದರೂ ತಪ್ಪಲ್ಲ. ಎಷ್ಟೋ ಸಲ ನಾನಂತೂ ಮನೆಯಿಂದ ತಂದಿದ್ದ ಓ‍ಕ್ಸ್‍ಫ಼ರ್ಡ್ ಡಿಕ್ಷನರಿ ಮುಂದಿಟ್ಟುಕೊಂಡೇ ಅಭ್ಯಾಸ ಮಾಡುತ್ತಿದ್ದೆ. ಅಥವಾ "N" ಹತ್ರ ’ಇದ್ರ ಅರ್ಥ ಏನೇ?’ ಅಂತ ಕೇಳ್ತಿದ್ದೆ.

ಅದೇನೋ ಅರಿಯದ ಪ್ರೀತಿಯ ನಂಟು ದಿನ ಕಳೆದಂತೆ ನಮ್ಮ ನಾಲ್ವರೊಳಗೆ ಬೆಳೆದಿತ್ತು. ಅದೇನೇ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯವಿರಲಿ ಅದು ನಮ್ಮ ರೂಮಿನ ನಾಲ್ಕು ಗೋಡೆಯನ್ನು ಹೊರ ದಾಟಲು ಎಂದಿಗೂ ಬಿಡ್ತಿರ್ಲಿಲ್ಲ. ಒಬ್ಬರಿಗೊಬ್ಬರೂ ತಮಾಷೆ ಮಾಡಿಕೊಂಡು ಕಳೆದ ಆ ದಿನಗಳು ಅದೆಷ್ಟು ಅಮೂಲ್ಯ ಅನಿಸುತ್ತೆ ಈವಾಗ ನನಗೆ. ಅದರಲ್ಲೂ "Photo Session" ತಮಾಷೆ ಘಟನೆ ನೆನಪಿಸಿಕೊಂಡರೆ ಈಗಲೂ ನಗು ಉಕ್ಕಿ ಬರುತ್ತೆ ನನಗೆ...

ಹೀಗೆ ಒಂದು ದಿನ ನಮಗೆ ನಾಲ್ವರಿಗೂ ಒಟ್ಟಿಗೆ ಸೇರಿ ಫೋಟೋ ತೆಗೆಸಿಕೊಳ್ಳುವ Idea ಬಂತು. "N" ಹೇಗೋ ಏನೋ ತನ್ನ ತಂದೆಯನ್ನ ಪುಸಲಾಯಿಸಿ flash camera ಕೂಡಾ ತಂದ್ಲು ಊರಿಂದ. ಅದಕ್ಕೆ ಪೂರ್ವ ತಯಾರಿ ಹೇಳುವಂತೆ ನಾವೆಲ್ಲರೂ ಊರಿಂದ ಅಮ್ಮನ ಸೀರೆ ತೆಗೆದುಕೊಂಡು ಬಂದಿದ್ದೆವು ಉಟ್ಟುಕೊಳ್ಳಲು. ಎಲ್ಲವೂ ಪ್ಲಾನ್‍ನಂತೆಯೇ ಆಗಿತ್ತು. ಒಂದು ಭಾನುವಾರ ನಾಲ್ವರೂ ಸೀರೆ ಉಟ್ಟುಕೊಂಡು ಕಾಲೇಜಿನ ಕ್ಯಾಂಪಸ್‍ಗೆ ಹೋದೆವು. ಮರ ಹೂಗಿಡಗಳಿಂದ ತುಂಬಿದ ನಮ್ಮ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಫೋಟೋ ತೆಗೆಯಲು ಜಾಗ ಹುಡುಕುವುದು ಏನೂ ಕಷ್ಟ ಅನಿಸಲಿಲ್ಲ ಬಿಡಿ. ಬೇರೆ ಬೇರೆ ಫೋಸ್‍ನಲ್ಲಿ ನಿಂತು ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡೆವು. ಆ ದಿನದ ಖುಷಿ ಹೇಳಲಾಗದಷ್ಟು ಅತಿಯಾಗಿತ್ತು ನಮಗೆ. ಆದರೆ ಅದಕ್ಕಿಂತ ಅತಿಯಾದ surprise ನಮಗಾಗಿ ಕಾದಿತ್ತು ಮುಸು ಮುಸು ನಗುತ್ತಾ !. ಅದರ ಮುಂದಿನ ಶನಿವಾರ ಫೋಟೋ ಪ್ರಿಂಟ್ ಮಾಡಿಸಲು "N" ಕ್ಯಾಮೆರಾ ತೆಗೊಂಡು ಸ್ಟುಡಿಯೋಕ್ಕೆ ಹೋದಾಗಲೇ ಗೊತ್ತಾಗಿದ್ದು ನಮಗೆ ಕ್ಯಾಮೆರಾದಲ್ಲಿ ರೋಲು ಇರಲೇ ಇಲ್ಲ ಎನ್ನುವುದು!!. ನಂತರ ನಮ್ಮ ಪಕ್ಕದ ರೂಮಿನ ಹುಡುಗಿಯರು ಫೋಟೋ ಬಂತಾ ಎಂದು ಕೇಳಿದ್ದಕ್ಕೆ ಫೋಟೋ ಸರಿಯಾಗಿ ಬರಲಿಲ್ಲ ಎಂದು ಹಾರಿಕೆಯ ಉತ್ತರ ಕೊಟ್ಟು ಸುಮ್ಮನಾದೆವು.

ಆ ಎರಡು ವರ್ಷ ಹೇಗೆ ಕಳೆದುಹೋಯಿತೋ ನಮಗೆ ಗೊತ್ತಗಾಗಲೇ ಇಲ್ಲ. ಅದರ ಸಿಹಿ ಅನುಭವ ಈಗ ಮೆಲುಕು ಹಾಕುವುದಷ್ಟೇ ಸಾಧ್ಯ ನಮಗೆ. ಈಗ ಜಗತ್ತಿನ ನಾಲಕ್ಕು ಮೂಲೆಯಲ್ಲಿ ಇರುವ ನಮಗೆ ಮತ್ತೊಮ್ಮೆ ಅಂಥಹ ಕ್ಷಣಗಳನ್ನು ಜೊತೆಯಲ್ಲಿ ನೆನಪಿಸಿ ನಗುವ ಸಮಯ ದೊರೆಯಲಿ ಎನ್ನುವುದೇ ನನ್ನ ಪುಟ್ಟ ಹಾರೈಕೆ.


-


Wednesday, January 06, 2010

ನೆನಪುಗಳ ನಂಟು

ಬಾಳಿನಲ್ಲಿ ಎಷ್ಟೋ ಬಗೆಯ ಸಂಬಂಧಗಳು ಹೀಗೇ ಬಂದು ಕೂಡುತ್ತವೆ, ಇನ್ನು ಕೆಲವು ತನ್ನಂತಾನಾಗಿಯೇ ಕಳಚಿ ಕೊಳ್ಳುತ್ತವೆ.ಕೆಲವು ಸಂಬಂಧಗಳು ಬೇಡವೆನ್ನಿಸಿದರೂ ಬಿಡಿಸಲಾಗದ ಗಂಟಾಗಿ ಉಳಿದು ಕೊಳ್ಳುತ್ತವೆ! ಪ್ರೀತಿಯ ನಂಟು ಇರದ ಸಂಬಂಧಕೆ ಅರ್ಥವಿದೆಯೇ? ಅಂಥವುಗಳ ಆಯುಷ್ಯವೂ ಬಲು ಕಡಿಮೆ. ಸಂಬಂಧವೆಂದರೆ ಒಡಹುಟ್ಟಿದವರೇ ಆಗಬೇಕಿಲ್ಲ. ಯಾರೋ ದಾರಿ ಮೇಲಿನ ಅಪರಿಚಿತ ಒಡನಾಡಿ, ಒಲವಿನ ಗೆಳೆಯರಾಗಬಹುದು.

ಸಂಬಂಧಗಳಿಗೆ ಹೆಸರಿರುವುದಿಲ್ಲ. ಹೆಸರಿಟ್ಟ ಸಂಬಂಧಗಳು ಅರ್ಥ ಕಳೆದು ಕೊಂಡರೆ ಅವಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ಕೊಂಡಿ ಕಳಚಿ ಹೋದರೂ ಸಾವಿರ ನೆನಪುಗಳು ಕೆಲವೊಮ್ಮೆ ಮನದಲ್ಲಿ ಮುಜುಗರ ತೋರದೆಯೇ ಉಳಿದು ಬಿಡುತ್ತವೆ. ಸಿಹಿ ಒಂದೇ ಇರಲಿ ಒಡನೆ ಅಂಟಿಕೊಂಡಿರುವ ಕಹಿ ಬೇಡವೇ ಬೇಡ ಎನ್ನಲು ಸಾಧ್ಯವೇ? ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅಂತ ಆಗಾಗ ಕಣ್ಮುಂದೆ ಬಂದು ಅಣಕಿಸುತ್ತವೆ ಈ ನೆನಪುಗಳು. ಕಾಡುವ ಈ ನೆನಪುಗಳಿಗೆ ಅದೆಷ್ಟು ಸಲ ಚಂದಾ ಬಾಕಿ ನೀಡಲು ಸಾಧ್ಯ?

-